ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ತಮ್ಮ ಅಂತಿಮ ಸಂಸ್ಕಾರಗಳ ಕುರಿತು ತಾವೇ ಭಕ್ತರಿಗೆ ಪತ್ರಬರೆದು ಮಾರ್ಗದರ್ಶನ ಮಾಡಿದ್ದು ಅದು ಎಲ್ಲರಿಗೂ ದಾರಿದೀಪದಂತೆ ಬೆಳಕು ಚೆಲ್ಲುತ್ತಿದೆ.
ಪತ್ರದ ಒಕ್ಕಣಿಕೆ ಇಂತಿದೆ:
ಅಂತಿಮ ಅಭಿವಂದನ ಪತ್ರ
ಅ.)
೧. ಬದುಕು ಅನುಭವಗಳ ಪ್ರವಾಹ,
೨. ಅದರ ಸಿರಿವಂತಿಕೆಯು ವಿಶ್ವ-ಚಿಂತನೆ ಹಾಗೂ ಸತ್ಯಶೋಧನೆಗಳಿಂದ. ಅದರ ಸೌಂದರ್ಯವು ರಾಗದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ.
೩. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ 'ಸಾಧನೆ'
೪. ಅಂಥ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ 'ಧರ್ಮ', ಅದು ಸ್ವ-ಪರ ನೆಮ್ಮದಿಗೆ ಕಾರಣ.
ಬ)
೫. ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು.
೬. ಅದನ್ನು ರೂಪಿಸಿದವರು 'ಗುರುದೇವರು, ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸ-ಹೃದಯರು, ಸಾಧಕರು, ಹಾಗೂ ಶ್ರೀ ಸಾಮಾನ್ಯರು.
೭. ನಿಸರ್ಗವು ಮೈ ಮನಸ್ಸುಗಳಿಗೆ ತಂಪನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ. ಜಾಗತಿಕ ತತ್ತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ.
ಕ)
೮. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ 'ಉಪಕೃತ',
೯. ಬದುಕು ಮುಗಿಯುತ್ತದೆ; ದೀಪ ಅಡಗಿದಂತೆ; ಮೇಘ ಕರಗಿದಂತೆ.
೧೦. ಉಳಿಯುವುದು ಬರಿ ಬಯಲು, ಮಹಾಮೌನ ಶೂನ್ಯ…
೧೧. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ; ನೋಡಿ ತಿಳಿದು ಅನುಭವಿಸಿದ್ಧೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು; ಅದಕ್ಕಾಗಿ ಈ ʼಅಂತಿಮ ಅಭಿವಾದನ ಪತ್ರʼ!
ಡ)
೧೨. ದೇಹದ ವಿಷಯದಲ್ಲಿ ಒಂದೆರಡು ಆಶಯಗಳು,
೧. ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡುವುದು,
೨. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ.
೩. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು,
೪. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು.
೧೩ ಅಂತಿಮ ನೆನಹು;
೧. “ಸತ್ಯವೂ ಇಲ್ಲ, ಅಸತ್ಯವೂ ಇಲ್ಲ.
ಸಹಜವೂ ಇಲ್ಲ, ಅಸಹಜವೂ ಇಲ್ಲ.
ನಾನೂ ಇಲ್ಲ, ನೀನೂ ಇಲ್ಲ.
ಇಲ್ಲ, ಇಲ್ಲ ಎಂಬುದು ತಾನಿಲ್ಲ.
ಗುಹೇಶ್ವರನೆಂಬುದು ತಾ ಬಯಲು,”
೨. ಅಂತ್ಯಃ ಪ್ರಣಾಮಾಂಜಲಿ!
(ಸ್ವಾಮಿ ಸಿದ್ಧೇಶ್ವರ )
0 Comments:
ಕಾಮೆಂಟ್ ಪೋಸ್ಟ್ ಮಾಡಿ